Home ಕರ್ನಾಟಕ ”ಧರ್ಮಸ್ಥಳದ ಧರ್ಮರಕ್ಷಣೆಗಾಗಿ ನಾವು” “ಎಸ್.ಐ.ಟಿ ತನಿಖೆಗೆ ಬೆಂಬಲಿಸಿ” ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

”ಧರ್ಮಸ್ಥಳದ ಧರ್ಮರಕ್ಷಣೆಗಾಗಿ ನಾವು” “ಎಸ್.ಐ.ಟಿ ತನಿಖೆಗೆ ಬೆಂಬಲಿಸಿ” ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

90
0

ಕೊಪ್ಪಳ : ”ಧರ್ಮಸ್ಥಳದ ಧರ್ಮರಕ್ಷಣೆಗಾಗಿ ನಾವು” “ಎಸ್.ಐ.ಟಿ ತನಿಖೆಗೆ ಬೆಂಬಲಿಸಿ” ವಿವಿಧ ಸಂಘಟನೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ ಇವರ ಮೂಲಕ ಗುರುವಾರ ಮನವಿ ಸಲ್ಲಿಸಿದರು.

ಮನವಿಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಮಾನುಷ ಘಟನೆಯ ಹಿನ್ನಲೆಯಲ್ಲಿ ಸಾರ್ವಾಜನಿಕರ ಅಭಿಪ್ರಾಯದ ಮೇರೆಗೆ ತಾವು ಎಸ್.ಐ.ಟಿ. ತನಿಖೆಗೆ ಆದೇಶ ನೀಡಿದ್ದು ನಾವೇಲ್ಲರೂ ಖುಷಿ ಪಟ್ಟಿದ್ದೆವು. ತನಿಖೆ ಸರಿ ದಾರಿಯಲ್ಲಿ ಸಾಗುತ್ತಿರುವಾಗ
ರಾಜ್ಯ ಸಚಿವ ಸಂಪುಟದ ಸದಸ್ಯರ ಮತ್ತು ವಿರೋಧ ಪಕ್ಷದ ಸದಸ್ಯರ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆಗಳು ಹೊರ ಬಿದ್ದಿದೆ.ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಕಳೆದ ನಾಲ್ಕು ದಶಕಗಳಿಂದ ಅತ್ಯಾಚಾರ, ಕೊಲೆ, ಭೂ ಕಬಳಿಕೆ ಪ್ರಕರಣಗಳು ಬಯಲು ಆಗುತ್ತಲೇ ಇದೆ.

ಶಾಲಾ ಕಾಲೇಜುಗಳಿಗೆ ಹೋದ ಹಲವಾರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು, ಆನೆ ಮಾವುತನ ಕುಟುಂಬದವರ ಜಾಗದಲ್ಲಿ ಯಾರು ಹೊಟೇಲ್ ಕಟ್ಟಿದ್ದಾರೆ. ಹಾಗೆ ಶವವಾಗಿ ಸಿಕ್ಕ ಪದ್ಮಲತಾ ಮತ್ತು ಸೌಜನ್ಯಳ ಶವಗಳು, ಮುಂತಾದ ಪ್ರಕರಣಗಳ ತನಿಖೆ ಆಗುವ ಹೊತ್ತಿನಲ್ಲಿ ಎಸ್ಐಟಿ ತನಿಖೆ ರದ್ದಾಗುತ್ತಿದೆ ಎನ್ನುವ ಆಂತಕ ನಮ್ಮಲ್ಲಿ ಮನೆ ಮಾಡಿದೆ. ಇದರಿಂದ ಪುಣ್ಯಕ್ಷೇತ್ರವೆಂದೆ ಕರೆಸಿಕೊಳ್ಳುವ ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಇಂಥಾ ಘೋರ ಕೃತ್ಯಗಳನ್ನೆಸಗಿದ ಅಪರಾಧಿಗಳು ಇಂದಿಗೂ ಪತ್ತೆಯಾಗಿಲ್ಲ ಎಂಬುದು ಇನ್ನೂ ಕಳವಳಕಾರಿ ಸಂಗತಿ. ಧರ್ಮಕ್ಷೇತ್ರದಲ್ಲಿ ನಡೆದ ಈ ಪಾತಕಗಳು ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲು.2012 ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದವು. ಈ ಪ್ರಕರಣ ಪ್ರಾಥಮಿಕವಾಗಿ ಬೆಳ್ತಂಗಡಿ ಪೊಲೀಸರು, ಆ ನಂತರ ಸಿಐಡಿ, ಅಂತಿಮವಾಗಿ 2013 ರಲ್ಲಿ ಸಿ.ಬಿ.ಐ.ಗೆ ವರ್ಗಾವಣೆಗೊಂಡು, 2023 ರಲ್ಲಿ ಸಿಬಿಐ ನ್ಯಾಯಾಲಯದಿಂದ ಹೊರಬಿದ್ದ ತೀರ್ಪು ಮತ್ತಷ್ಟು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನಿಖಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಎಸಗಿದ ಗಂಭೀರ ದೋಷಗಳನ್ನು ಬೊಟ್ಟು ಮಾಡಿ ತೋರಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರ್ಟ್ ಆದೇಶಿಸಿದೆ.

ಅದೇ ವೇಳೆಗೆ ನಿರಪರಾಧಿಯಾಗಿದ್ದ ಸಂತೋಷ್ ರಾವ್ ರವರ ಮೇಲೆ ಆರೋಪ ಸಾಬೀತುಪಡಿಸುವ ಯಾವ ಸಾಕ್ಷಿಗಳೂ ಇಲ್ಲವೆಂದು ಹೇಳಿ ಅನಾವಶ್ಯಕವಾಗಿ ಆತನನ್ನು ಜೈಲಿನಲ್ಲಿರಿಸಿದ್ದಕ್ಕೆ ಪರಿಹಾರ ನೀಡಲು ಕೂಡ ಆದೇಶಿಸಿದೆ. ಈಗ ಸಾಕ್ಷಿ ಫಿರ್ಯಾದುದಾರರೊಬ್ಬರು ಮುಂದೆ ಬಂದು ತಾನು ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ಮಾಡುವಾಗ ಹಲವಾರು ಹೆಣಗಳನ್ನು ಹೂತಿದ್ದೇನೆಂದು ನ್ಯಾಯಾಧೀಶರ ಸಮ್ಮುಖದಲ್ಲಿ ನೀಡಿದ ಹೇಳಿಕೆಯ ನಂತರ ವಿಶೇಷ ತನಿಖಾ ದಳವೊಂದನ್ನು ಸರ್ಕಾರ ರಚಿಸಿ ತನಿಖೆ ನಡೆಯುತ್ತಿದೆ. ಸರ್ಕಾರದ ಈ ಕ್ರಮವನ್ನು ನಾವು ಬೆಂಬಲಿಸುತ್ತೇವೆ.

ಧರ್ಮಕ್ಷೇತ್ರದಲ್ಲಿ ಪಾತಕ ಕೃತ್ಯಗಳನ್ನು ಎಸಗುತ್ತಿರುವವರನ್ನು ಪತ್ತೆಹಚ್ಚಿ, ಅಪರಾಧ ಎಸಗಿದವರು ಯಾರೇ ಇದ್ದರೂ, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ನೆಲದ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತೇವೆ.ಮೊನ್ನೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಆಡಿದ ಮಾತುಗಳು ನಮಗೆ ಆಘಾತವುಂಟುಮಾಡಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿಗಳ ಹೇಳಿಕೆಗಳೂ ಕೂಡಾ ಎಸ್.ಐ.ಟಿ.ಅಧಿಕಾರಿಗಳ ಧೃತಿಗೆಡಿಸುವಂತೆ ಇದೆ.

ನ್ಯಾಯಯುತವಾಗಿ ಸತ್ಯ ಹೊರಬರಲೆಂದು ಕಾಯುತ್ತಿರುವ ಸಂತ್ರಸ್ಥರ ಕುಟುಂಬಗಳಿಗೆ ಭಯ ಹಾಗೂ ನಿರಾಸೆ ಹುಟ್ಟಿಸುವಂತೆ ಈ ಮಾತುಗಳಿವೆ.ಇನ್ನು ವಿರೋಧ ಪಕ್ಷವಾದ ಬಿ.ಜೆ.ಪಿ.ಯ ಶಾಸಕರುಗಳ ಮಾತುಗಳು, ನಡವಳಿಕೆಯಂತೂ ಕಾನೂನು ಪ್ರಕ್ರಿಯೆಯನ್ನೇ ಅಪಹಾಸ್ಯ ಮಾಡುತ್ತಿವೆ.ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡು ಜನರನ್ನು ಅನಗತ್ಯವಾಗಿ ಭಾವನಾತ್ಮಕವಾಗಿ ಪ್ರಚೋದಿಸುತ್ತಿದ್ದಾರೆ. ಇವರೆಲ್ಲರ ಇಂಥಹ ನಡವಳಿಕೆಯಿಂದ ಈ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿದಾರರಲ್ಲಿ ಭಯಭೀತಿ ಹುಟ್ಟಿಸುವಂತಾಗಿರುವುದು ಮತ್ತೂ ಗಂಭೀರವಾದ ವಿಷಯ.ಹತ್ಯೆ, ಅತ್ಯಾಚಾರಗಳಂತಹ ಹೇಯ ಕೃತ್ಯ ಎಸಗಿದವರನ್ನು ಪತ್ತೆ ಮಾಡಲು ತಮ್ಮದೇ ಸರ್ಕಾರವಿದ್ದಾಗ ಪ್ರಯತ್ನವೇ ಮಾಡದ ವಿರೋಧ ಪಕ್ಷದವರು ಈಗಲೂ ಅದಕ್ಕೆ ಅಡ್ಡಿ ಪಡಿಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.ಪಾತಕ ಎಸಗಿದ ವ್ಯಕ್ತಿಗಳ ಬಗ್ಗೆ ಮಾತನಾಡಿದರೆ ಅದನ್ನು ದುರುದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರವೆಂದು ಬಿಂಬಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಭಕ್ತರ ನಂಬಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಂಚು ಇದಾಗಿದೆ. ಇದು ನೈತಿಕವಾಗಿಯೂ, ಧಾರ್ಮಿಕವಾಗಿಯೂ ಅಕ್ಷಮ್ಯ ಅಪರಾಧ.ನಾವು ಗಮನಿಸಿದಂತೆ ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿಯಾಗಿ ಯಾರೂ ಮಾತನಾಡುತ್ತಿಲ್ಲ. ಧರ್ಮಕ್ಷೇತ್ರದಲ್ಲಿ ನಡೆದ ದುರ್ಘಟನೆಗಳಿಗೆ ಕಾರಣರಾದ ದುಷ್ಕರ್ಮಿಗಳು ಯಾರೆಂಬ ಸತ್ಯವನ್ನು ಬಯಲಿಗೆಳೆದು, ಕಾನೂನು ಕ್ರಮಕ್ಕೆ ಒಳಪಡಿಸಿ ಎನ್ನುವುದು ಧರ್ಮಸ್ಥಳದ ಧರ್ಮ ರಕ್ಷಣೆಗಾಗಿ ನಾವು ಒಕ್ಕೂಟದ ಆಗ್ರಹ.

ಆದರೆ ಅಪರಾಧಿಗಳು ಯಾರೆಂದು ಬಯಲಾಗುವುದನ್ನು ತಡೆಯಲೆಂಬಂತೆ ಮತ್ತು ತಪ್ಪಿತಸ್ಥರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವಂತೆ ಕೆಲವು ಶಕ್ತಿಗಳು ವರ್ತಿಸುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದ್ದರಿಂದ ನ್ಯಾಯ ಮತ್ತು ಸತ್ಯದ ಪರವಾಗಿ ನಿಂತು ಕುಟುಂಬದ ಎಳೆ ಬಾಲೆಯರ ಮೇಲೆ ನಡೆದ ಅತ್ಯಾಚಾರ, ಕೊಲೆಗಳಿಗೆ ನ್ಯಾಯ ಕೊಡಿರೆಂದು ಕೇಳುತ್ತಿರುವ ಹೆತ್ತ ತಾಯಂದಿರಿಗೆ ಕನಿಷ್ಟ ಸಾಂತ್ವನದ ಹೆಜ್ಜೆಗಳಾಗಿ ಎಸ್.ಐ.ಟಿ. ತನಿಖೆಯನ್ನು ನಾವು ಪರಿಗಣಿಸುತ್ತೇವೆ. ಯಾವುದೇ ಅಡ್ಡಿ ಅಡಚಣೆಗಳಿಗೆ ಆಸ್ಪದ ಕೊಡದಂತೆ ಎಸ್.ಐ.ಟಿ ನಿರಾತಂಕವಾಗಿ ಕಾರ್ಯನಿರ್ವಹಿಸಿ,ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕೆಂದು ಆಗ್ರಹಿಸುತ್ತೇವೆ.

ಹಾಗೆಯೇ, ತಮ್ಮ ಕಾನೂನುಬಾಹಿರ.ಅನೈತಿಕ ಹೇಳಿಕೆಗಳ ಮೂಲಕ ಎಸ್.ಐ.ಟಿ. ತನಿಖೆಯನ್ನು ಗೊಂದಲಕ್ಕೆ ದೂಡದಂತೆ ತಮ್ಮ ಸಂಪುಟದ ಸದಸ್ಯರಿಗೆ ತಾಕೀತು ಮಾಡಬೇಕೆಂದು ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಎಮ್.ಹೊಸಮನಿ.ಬಂದೇ ನವಾಜ್ ಮನಿಯಾರ್.ದಲಿತ ಯುವ ವೇದಿಕೆ ಸಂಚಾಲಕ ಸಂಕಪ್ಪ ಮೀಸಿ. ಈ ದಿನ.ಕಾಮಿನ ಪ್ರತಿನಿಧಿ ಕೇಶವ್ ಕಟ್ಟಿಮನಿ. ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡ ಮಂಗಳೇಶ್ ರಾಥೋಡ್.ಕೊಳಚೆ ನಿರ್ಮೂಲನಾ ವೇದಿಕೆ ಸಂಚಾಲಕ ಗಾಳೆಪ್ಪ ಮುಂಗೋಲಿ. ರೈಲ್ವೆ ಜನಪರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು. ಶಿವಪ್ಪ ಹಡಪದ್ ಮುಂತಾದವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here