ಕೊಪ್ಪಳ ಜಿಲ್ಲೆಯ ಪಟ್ಟಾ ಲ್ಯಾಂಡ್ ರಾಯಲ್ಟಿ, ಬೀದರ್ ಜಿಲ್ಲೆಗೆ ಮರಳು.!
2020 ರ ಮರಳು ನೀತಿ ಪ್ರಕಾರ, ಪಟ್ಟಾ ಲ್ಯಾಂಡ್ ಮರಳು ರಾಯಲ್ಟಿ ಕೇವಲ ಆ ಜಿಲ್ಲೆಗೆ ಮಾತ್ರ ಸೀಮಿತ ಆಗಿರುತ್ತದೆ. ಪಟ್ಟಾ ಲ್ಯಾಂಡ್ ರಾಯಲ್ಟಿ ಪಡೆದು ಅಂತರ್ ಜಿಲ್ಲೆಗೆ ಮರಳು ಸಾಗಾಣಿಕೆ ಮಾಡಲು ಅನುಮತಿಸುವುದಿಲ್ಲ.
ಪಟ್ಟಾ ಲ್ಯಾಂಡನ ಮರಳು ಆಯಾ ತಾಲೂಕಿನಲ್ಲಿ ಮಾತ್ರ ವಿಲೇವಾರಿ ಮಾಡಲು ಅನುಮತಿ ನೀಡತಕ್ಕದ್ದು.
ಆದರೆ, ಮರಳು ನೀತಿ ಉಲ್ಲಂಘಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಟ್ಟಿನಹಾಳ ಮತ್ತು ಕನಕಗಿರಿ ತಾಲೂಕಿನ ನವಲಿ ಗ್ರಾಮಗಳ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಲೈಸನ್ಸ್ ಪಡೆದ ಪರವಾನಗಿದಾರರು ಬೀದರ್ ಜಿಲ್ಲೆಗೆ ಮರಳು ಸಾಗಾಣಿಕೆ ಮಾಡಲು ಖನಿಜ ರವಾನೆ ಪರವಾನಿಗೆ (Mineral Dispatch Permit) ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಗಂಭೀರ ಆರೋಪ ಮಾಡಿದ್ದಾರೆ.
ಈ ಅಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ಶರಣಪ್ಪ ರೆಡ್ಡಿ ಲಖಣಾಪೂರ ಆರೋಪಿಸಿದ್ದಾರೆ.
ಗಣಿ ಷರತ್ತುಗಳನ್ನು ಉಲ್ಲಂಘಿಸಿದ ಪರವಾನಗಿದಾರನ ಗಣಿಗಾರಿಕೆ ಲೈಸನ್ಸನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಆ ಪಟ್ಟಾ ಜಮೀನುಗಳ ಗಣಿ ಲೈಸನ್ಸ್ ರದ್ದು ಮಾಡದಿದ್ದರೆ ಹಾಗೂ ಗಣಿ ಇಲಾಖೆ ಅಧಿಕಾರಿಗಳನ್ನು ಅಮಾನತ್ತು ಮಾಡದಿದ್ದರೆ, ನಿರ್ದೇಶಕರು ಮತ್ತು ಸಚಿವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಪತ್ರಿಕೆಗೆ ತಿಳಿಸಿದ್ದಾರೆ.