ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆಯಬೇಕಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದ್ದು, ದಲಿತರಿಗೆ ಸಿಗಬೇಕಾದ ಮೀಸಲಾತಿಯನ್ನು ತಪ್ಪಿಸಲು ಪ್ರಬಲ ಶಕ್ತಿಗಳು ವ್ಯವಸ್ಥಿತ ಸಂಚು ರೂಪಿಸುತ್ತಿವೆ ಎಂದು ದಲಿತ ವಿದ್ಯಾರ್ಥಿ ಸಮುದಾಯ ಗಂಭೀರ ಆರೋಪ ಮಾಡಿದೆ.
ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ 2023ರ ಅಕ್ಟೋಬರ್ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಹೊಸ ಮೀಸಲಾತಿ ರೋಸ್ಟರ್ ಅನ್ವಯ, ಈ 75 ಹುದ್ದೆಗಳಲ್ಲಿ 24 ಸ್ಥಾನಗಳು ಪರಿಶಿಷ್ಟ ಜಾತಿಗೆ (SC) ಮತ್ತು 10 ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ (ST) ಲಭ್ಯವಾಗಲಿದ್ದು, ಒಟ್ಟು 34 ಹುದ್ದೆಗಳು ದಲಿತ ಸಮುದಾಯಕ್ಕೆ ಮೀಸಲಾಗಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ದಲಿತರಿಗೆ ಪ್ರಾತಿನಿಧ್ಯ ಸಿಗುತ್ತಿರುವುದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಲೇ ಬಂದಿವೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಪದೇ ಪದೇ ಪರೀಕ್ಷೆ ಮುಂದೂಡಿಕೆ:
ನೇಮಕಾತಿ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಕಾರಣ ನೀಡಿ ಪರೀಕ್ಷೆಯನ್ನು ಮುಂದೂಡಲಾಗುತ್ತಿದೆ. 2025ರ ಫೆಬ್ರವರಿ 22ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಒಂದು ವಾರ ಮುಂಚಿತವಾಗಿ ರದ್ದುಗೊಳಿಸಲಾಯಿತು. ನಂತರ ಮಾರ್ಚ್ 5ರಂದು ಮರುನಿಗದಿ ಮಾಡಲಾಯಿತಾದರೂ, ಪರೀಕ್ಷೆಗೆ ಕೇವಲ 12 ಗಂಟೆ ಬಾಕಿ ಇರುವಾಗ ಯಾವುದೇ ಸಮಂಜಸ ಕಾರಣವಿಲ್ಲದೇ ಮುಂದೂಡಲಾಗಿತ್ತು ಎಂಬುದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ನ್ಯಾಯಾಲಯದ ತೀರ್ಪು ಸ್ಪಷ್ಟವಿದ್ದರೂ ವಿಳಂಬ:
ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು (WP No. 202940/2024) ಏಕಸದಸ್ಯ ಪೀಠವು ವಜಾಗೊಳಿಸಿ, ವಿವಿಯ ನೇಮಕಾತಿ ಪ್ರಕ್ರಿಯೆ ಯುಜಿಸಿ (UGC) ನಿಯಮಗಳಂತೆಯೇ ಇದೆ ಎಂದು 2025ರ ಆಗಸ್ಟ್ 4ರಂದು ಸ್ಪಷ್ಟ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನೂ (WA No. 200242/2025) ದ್ವಿಸದಸ್ಯ ಪೀಠ ಎತ್ತಿಹಿಡಿದಿದೆ.
ಕಾನೂನಾತ್ಮಕವಾಗಿ ನೇಮಕಾತಿಗೆ ಹಸಿರು ನಿಶಾನೆ ಸಿಕ್ಕಿದ್ದರೂ, ವಿರೋಧಿ ಬಣಗಳು ನ್ಯಾಯಾಲಯದ ತೀರ್ಪುಗಳನ್ನು ಮರೆಮಾಚಿ, ಸುಳ್ಳು ಆರೋಪಗಳನ್ನು ಹಬ್ಬಿಸುವ ಮೂಲಕ ಪ್ರಕ್ರಿಯೆಯನ್ನು ಹಳಿ ತಪ್ಪಿಸಲು ಯತ್ನಿಸುತ್ತಿವೆ.
ಜ.17ರ ಪರೀಕ್ಷೆಗೆ ಆತಂಕ:
ಸದ್ಯ ಜನವರಿ 17ರಂದು ನೇಮಕಾತಿ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಆದರೆ, ಈ ಬಾರಿಯೂ ಪರೀಕ್ಷೆಗೆ ಅಡ್ಡಿಪಡಿಸಲು ತೆರೆಮರೆಯಲ್ಲಿ ಕಸರತ್ತುಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಬಾರದು, ದಲಿತ ವಿರೋಧಿ ನೀತಿಗಳನ್ನು ಕೈಬಿಟ್ಟು ಪಾರದರ್ಶಕವಾಗಿ ನೇಮಕಾತಿ ಪೂರ್ಣಗೊಳಿಸಬೇಕು ಎಂದು ದಲಿತ ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದ್ದಾರೆ.

