ಕಾರ್ಮಿಕ ಇಲಾಖೆದಿಂದ ಹಠಾತ್ ದಾಳಿ : ವಾಹನ ಚಾಲಕ, ಪಾಲಕರಿಗೆ ಜಾಗೃತಿ ನೀಡಿದರು
ಹುಣಸಗಿ : ನವೆಂಬರ್ 15, : ಒದುವ ವಯಸ್ಸಿನ ಮಕ್ಕಳನ್ನು ಮತ್ತೊಮ್ಮೆ ಕೂಲಿಗೆ ಕಳುಹಿಸದೆ ಶಾಲೆಗೆ ಕಳುಹಿಸುವಂತೆ ಪಾಲಕ, ಪೋಷಕರು ಹಾಗೂ ಆಟೋ, ಟಂಟಂಗಳ ಚಾಲಕರಿಗೆ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ1986, ತಿದ್ದುಪಡಿ 2016”ರ ಕುರಿತು ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ಹೇಳಿದರು.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಸವೇಶ್ವರ ವೃತ್ತದ ಮಾರ್ಗವಾಗಿ ಆಟೋ, ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಕಾರ್ಮಿಕ ಇಲಾಖೆಯಿಂದ ಹಠಾತ್ ದಾಳಿ/ತಪಾಸಣೆಯನ್ನು ಕೈಗೊಂಡು ಕೂಲಿ ಕೆಲಸಕ್ಕಾಗಿ ಆಟೋಗಳಲ್ಲಿ ತೆರಳಿದ್ದ ಸುಮಾರು 17ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಹೊಗುವಂತೆ ತಿಳುವಳಿಕೆ ನೀಡಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು ಮತ್ತು ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ವಾಹನಗಳ ಚಾಲಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಪ್ರಕರಣ ದಾಖಲಿಸಲಾಯಿತು.
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕ, ಆಟೋ-ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಿರಂತರವಾಗಿ ಬಾಲ/ಕಿಶೋರ ಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಹೊರತಾಗಿಯೂ ಆಟೋ, ಟಂಟಂಗಳ ಮೂಲಕ ಕೃಷಿ ಹಾಗೂ ಇನ್ನಿತರೆ ಕೆಲಸಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಚಾಲಕರ ವಿರುದ್ಧ ಆರ್.ಟಿ.ಓ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುರಪುರ ಕಾರ್ಮಿಕ ನಿರೀಕ್ಷಕರಾದ ಶಿವಪ್ಪ ಜಮಾದಾರ್ ರವರು ಮಾತನಾಡಿ, ಒದುವ ಮಕ್ಕಳನ್ನು ಕೂಲಿಗೆ ಕಳುಹಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹಾನಿ ಮಾಡದೇ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ಎಂದು ಪಾಲಕ, ಪೋಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕರಾದ ಪ್ರಭಾಕರ್, ಆರಕ್ಷಕ ನಿರೀಕ್ಷಕರಾದ ರಾಹುಲ್, ಎ.ಎಸ್.ಐ ಚಂದ್ರಾಮಪ್ಪ, ಹೆಡ್ ಕಾನ್ಸ್ಟೇಬಲ್ ಶ್ರೀಶೈಲ ಸಜ್ಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುಣಸಗಿಯ ಮೆಲ್ವೀಚಾರಕಿಯಾದ ಶ್ರೀಮತಿ ಜಯಶ್ರೀ ಬಿರಾದಾರ್, ಸರಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆ ಯು.ಕೆ.ಪಿ ಕ್ಯಾಂಪ್ ಹುಣಸಗಿಯ ಮುಖ್ಯ ಗುರುಗಳಾದ ಬಸನಗೌಡ, ಕಾರ್ಮಿಕ ಇಲಾಖೆಯ ಎಲ್.ಎನ್ ಚೌದ್ರಿ, ರಮೇಶ್ ಕೆಲ್ಲೂರು, ಮಾರ್ಗದರ್ಶಿ ಸಂಸ್ಥೆಯ ವಿದ್ಯಾ ಕೊಂಡಗಳ್ಳಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಆಶಾ ಎಸ್ ರಾಥೋಡ, ಶ್ರೀಮತಿ ರೇಣುಕಾ ಚೌವ್ವಾಣ, ರೇಖಾ ಪಡಶೆಟ್ಟಿ ಉಪಸ್ಥಿತರಿದ್ದರು.

