ಗುರುಮಿಠಕಲ್ ಕಾಲೇಜಿನಲ್ಲಿ ‘ಸ್ವಪ್ನಮಂಟಪ’ ಚಿತ್ರ ಪ್ರದರ್ಶನ; ಗಡಿನಾಡಿನಲ್ಲಿ ಕನ್ನಡದ ಗೀತೆ ಮೊಳಗಿಸುವ ಕಾರ್ಯಕ್ಕೆ ಶ್ಲಾಘನೆ
ಗುರುಮಿಠಕಲ್ (ಯಾದಗಿರಿ ಜಿಲ್ಲೆ): ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಶ್ರಮ ಸಂಸ್ಕೃತಿಯ ಪ್ರತಿಪಾದಕರು. ಈ ಕಾರಣಕ್ಕಾಗಿಯೇ ಅವರು “ಬೆವರೇ ನಮ್ಮ ದೇವರು” ಎಂದು ಸಾರಿದ್ದಾರೆ ಎಂದು ಲೇಖಕ ಡಾ. ಸಿದ್ಧರಾಮ ಹೊನ್ಕಲ್ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಬರಗೂರು ರಾಮಚಂದ್ರಪ್ಪ ಅವರೇ ನಿರ್ದೇಶಿಸಿದ “ಸ್ವಪ್ನಮಂಟಪ” ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಆಶಯ ನುಡಿ ಆಡುತ್ತಾ ಅವರು ಮಾತನಾಡಿದರು.
“ಕೋಗಿಲೆಗಿಂತ ಹಂಚಿಕೊಂಡು ತಿನ್ನುವ ಕಾಗೆ ನಮಗೆ ಮುಖ್ಯ. ಶ್ರೀಗಂಧದ ಮರವನ್ನು ನಾವು ಕಂಡಿಲ್ಲ. ನಮ್ಮ ಸುತ್ತಲೂ ಇರುವ ಜಾಲಿಯೇ ನಮ್ಮ ಸಾಹಿತ್ಯ ರಚನೆಗೆ ಪ್ರತಿಮೆಯಾಗಬೇಕು ಎಂದು ಪ್ರತಿಪಾದಿಸುವ ಈ ನಾಡು ಕಂಡ ಶ್ರೇಷ್ಠ ಲೇಖಕರಲ್ಲಿ ಬರಗೂರರು ಒಬ್ಬರು” ಎಂದು ಡಾ. ಹೊನ್ಕಲ್ ಬರಗೂರರ ಚಿಂತನೆಯನ್ನು ಪರಿಚಯಿಸಿದರು.
ಗಡಿನಾಡಿನಲ್ಲಿ ಕನ್ನಡದ ಗೀತೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಅವರು ಮಾತನಾಡಿ, ಆಂಧ್ರದ ಗಡಿನಾಡು ಆದ ನಮ್ಮ ಗುರುಮಿಠಕಲ್ ಪದವಿ ವಿದ್ಯಾರ್ಥಿಗಳಿಗೆ ಚಾರಿತ್ರಿಕ ಹಾಗೂ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಿದ ‘ಸ್ವಪ್ನಮಂಟಪ’ ಚಿತ್ರವನ್ನು ತೋರಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಗೀತೆ ಮೊಳಗಿಸುವ ಸಾರ್ಥಕ ಕೆಲಸ ಮಾಡಿದ ನಾಡೋಜ ಬರಗೂರು ಹಾಗೂ ಡಾ. ಹೊನ್ಕಲ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಬಸರೆಡ್ಡಿ ಪಾಟೀಲ, ವಿಶ್ರಾಂತ ಪ್ರಾಂಶುಪಾಲ ಲಕ್ಷ್ಮಯ್ಯ ಕಲಾಲ್, ಮತ್ತು ಡಾ. ಬಾಬುರಾಯ ದೊರೆ ಮುಂತಾದವರು ಉಪಸ್ಥಿತರಿದ್ದರು. ಡಾ. ಮರೆಪ್ಪ ನಾಟೇಕಾರ ಅವರು ಕಾರ್ಯಕ್ರಮ ನಿರ್ವಹಿಸಿ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

