Home ರಾಜಕೀಯ ಸಂಚಾರ ದಟ್ಟಣೆ ನಿವಾರಣೆಗೆ ಸಮನ್ವಯದ ಕ್ರಮಕ್ಕೆ ಮುಖ್ಯ ಆಯುಕ್ತರ ಸೂಚನೆ

ಸಂಚಾರ ದಟ್ಟಣೆ ನಿವಾರಣೆಗೆ ಸಮನ್ವಯದ ಕ್ರಮಕ್ಕೆ ಮುಖ್ಯ ಆಯುಕ್ತರ ಸೂಚನೆ

by Laxmikanth Nayak
0 comments

ಬೆಂಗಳೂರು, .4: ಸಂಚಾರ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೆಟ್ರೋ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳು ಸಮನ್ವಯತೆಯಿಂದ ಪರಿಹಾರೋಪಾಯಗಳನ್ನು ರೂಪಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಇಂದು ಸೂಚನೆ ನೀಡಿದರು. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಅಧಿಕಾರಿಗಳಿಗೆ ಈ ಆದೇಶಗಳನ್ನು ನೀಡಿದರು. ಬಳ್ಳಾರಿ ರಸ್ತೆಯ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಸ್ಥಳಗಳಲ್ಲಿ ಉಳಿದಿರುವ ಭಗ್ನಾವಶೇಷಗಳು ಮತ್ತು ಅನುಪಯುಕ್ತ ಕಬ್ಬಿಣ ವಸ್ತುಗಳನ್ನು ತಕ್ಷಣವೇ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಮೆಟ್ರೋ ಅಧಿಕಾರಿಗಳಿಗೆ ಸೂಚಿಸಲಾಯಿತು. ಇದೇ ವೇಳೆ, ಹಾಳಾಗಿರುವ ಹೆಬ್ಬಾಳ ಮೇಲ್ಸೇತುವೆಯ ಮೇಲ್ಭಾಗವನ್ನು ತಕ್ಷಣ ಸಂಪೂರ್ಣ ಡಾಂಬರೀಕರಣ ಮಾಡಿ ವಾಹನ ಸಂಚಾರವನ್ನು ಸುಗಮಗೊಳಿಸಲು ಆದೇಶಿಸಲಾಯಿತು.

ಹೆಬ್ಬಾಳದಿಂದ ಕೊಡಿಗೆಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ಹಯಾತ್ ಸೆಂಟರ್ ಮುಂಭಾಗದ ರಸ್ತೆಯ ಮಧ್ಯಭಾಗದಲ್ಲಿ ಸರಿಯಾಗಿ ಅಳವಡಿಸದಿರುವ ಸ್ಲ್ಯಾಬ್‌ಗಳನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಿದ ಮುಖ್ಯ ಆಯುಕ್ತರು, ಕೊಡಿಗೆಹಳ್ಳಿ ಸಿಗ್ನಲ್ ನಂತರದ ಕ್ರಾಸ್ ಕಲ್ವರ್ಟ್ ಬಳಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ತಡೆಯಲು ಕಲ್ವರ್ಟ್‌ನ ಹೂಳನ್ನು ತೆಗೆದು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಳ್ಳಾರಿ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗಾಗಿ ಬ್ಯಾಟರಾಯನಪುರದಲ್ಲಿ ಜಾರಿಯಲ್ಲಿರುವಂತೆ, ಅಗತ್ಯವಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಒಳಹೊಕ್ಕು-ಹೊರಹೊಮ್ಮುವ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು. ಸರ್ವೀಸ್ ರಸ್ತೆ ಮತ್ತು ಮುಖ್ಯ ರಸ್ತೆ ಸಂಪರ್ಕ ಬಿಂದುಗಳಲ್ಲಿ ನಾಗರಿಕರಿಗೆ ಅನುಕೂಲವಾಗಲು ಸೂಚನಾ ಫಲಕಗಳನ್ನು (ಸೈನೇಜ್ ಬೋರ್ಡ್‌ಗಳು) ಅಳವಡಿಸಬೇಕು. ಜೊತೆಗೆ, ಪಾದಚಾರಿಗಳ ಓಡಾಟಕ್ಕೆ ಅನುಕೂಲವಾಗಲು ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಸ್ಕೈವಾಕ್ ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ಆದೇಶಿಸಲಾಯಿತು. ಇದಲ್ಲದೆ, ಮುಖ್ಯ ರಸ್ತೆ ಮತ್ತು ಸರ್ವೀಸ್ ರಸ್ತೆಯ ಮಧ್ಯದಲ್ಲಿರುವ ಚರಂಡಿಯ ಬಹುತೇಕ ಹಾಳಾಗಿರುವ ಸ್ಲ್ಯಾಬ್‌ಗಳನ್ನು ದುರಸ್ತಿ ಮಾಡಿ, ಚರಂಡಿಯಲ್ಲಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸೂಚಿಸಲಾಯಿತು. ಯಲಹಂಕ ರೈಲ್ವೆ ಸೇತುವೆ ಬಳಿ ಸೈಡ್ ಡ್ರೈನ್ ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಮಳೆಯ ಸಮಯದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯಲು ಅಧಿಕಾರಿಗಳಿಗೆ ಆದೇಶಿಸಿದರು. ಇದೇ ಸಂದರ್ಭದಲ್ಲಿ, ಯಲಹಂಕ ರೈತರ ಸಂತೆ ಬಳಿ ಸೈಡ್ ಡ್ರೈನ್ ನಿರ್ಮಿಸಲು, ಬಾಗಲೂರು ಕ್ರಾಸ್‌ನಲ್ಲಿ ಜಲಾವೃತ ಮತ್ತು ರಸ್ತೆ ದುರಸ್ತಿ, ಗುಂಡಿ ಮುಚ್ಚುವಿಕೆ ಹಾಗೂ ಅಲ್ಲಾಳಸಂದ್ರ ಗೇಟ್ ಬಳಿ ಎನ್‌ಎಚ್‌ಎಐ ಮೇಲ್ಸೇತುವೆ ಕೆಳಭಾಗದ ಖಾಲಿ ಜಾಗವನ್ನು ಸುಂದರೀಕರಣಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

 

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಅಕ್ರಮ ಮದ್ಯದ ವಿರುದ್ಧ ಅಣಿಬಿಯಲ್ಲಿ ಜಾಗೃತಿ ಜಾಥಾ ರಾಯಚೂರು ಕೃಷಿ ವಿವಿ: ದಲಿತರ ಮೀಸಲಾತಿ ಸಹಿಸದವರಿಂದ ನೇಮಕಾತಿ ತಡೆಗೆ ಸಂಚು; ಜ.17ರ ಪರೀಕ್ಷೆಗೂ ಅಡ್ಡಿ ಸಾಧ್ಯತೆ? - ದಲಿ... ಗ್ರಾಮದ ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣೆ ಮುಖ್ಯ : ಸಿಇಒ ಲವೀಶ್ಒರಡಿಯಾ ದೇವತ್ಕಲ್–ಬಾಚಿಮಟ್ಟಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದ... ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?